ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ ಬಳಿಕ ಪಾಕಿಸ್ತಾನ ಹಾಗೂ ಭಾರತದ ನಡುವಿನ ಸಂಬಂಧ ಮತ್ತಷ್ಟು ಹಳಸಿದ್ದು, ಈ ನಡುವಲ್ಲೇ ಗಡಿಯಲ್ಲಿ ಉದ್ಧಟತನ ಪ್ರದರ್ಶಿಸುತ್ತಿರುವ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಈ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿ, ಹಿಮ್ಮೆಟ್ಟುವಂತೆ ಮಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತೀಯ ಸೇನೆ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಈ ನಡುವೆ ಗಡಿ ನಿಯಂತ್ರಣ ರೇಖೆ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. 2025 ರ ಏಪ್ರಿಲ್ 26-27 ರ ರಾತ್ರಿ, ಪಾಕಿಸ್ತಾನಿ ಸೇನೆ ತುಟ್ಮರಿ ಗಾಲಿ ಮತ್ತು ರಾಂಪುರ ಸೆಕ್ಟರ್‌ಗಳ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿದ್ದು, ಭಾರತೀಯ ಸೇನೆ ದಿಟ್ಟ ಉತ್ತರ ನೀಡಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಏತನ್ಮಧ್ಯೆ, ಕುಲ್ಗಮ್ ಪೊಲೀಸರು ಸೇನೆ ಮತ್ತು ಸಿಆರ್‌ಪಿಎಫ್‌ ಜೊತೆಗಿನ ಸಂಘಟಿತ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕ ಸಹಚರರನ್ನು ಬಂಧಿಸಿದ್ದು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಂಗ್ರಹವನ್ನು ವಶಪಡಿಸಿಕೊಂದ್ದಾರೆ.

ಅಧಿಕೃತ ಪ್ರಕಟಣೆಯ ಪ್ರಕಾರ, ಖೈಮೋಹ್‌ನ ಮಾತಲ್‌ಹಾಮಾ ಚೌಕ್ ಥೋಕರ್‌ಪೋರಾದಲ್ಲಿ ಸ್ಥಾಪಿಸಲಾದ ಚೆಕ್‌ಪೋಸ್ಟ್‌ನಲ್ಲಿ ಇಬ್ಬರು ವ್ಯಕ್ತಿಗಳನ್ನು ತಡೆದು, ಪರಿಶೀಲನೆ ನಡೆಸಿದ ಬಳಿಕ ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ. ಬಂಧಿತರನ್ನು ಅಬ್ದುಲ್ ಸಲಾಮ್ ಭಟ್ ಅವರ ಮಗ ಬಿಲಾಲ್ ಅಹ್ಮದ್ ಭಟ್ ಮತ್ತು ಖೈಮೋಹ್‌ನ ಥೋಕರ್‌ಪೋರಾ ನಿವಾಸಿಗಳಾದ ಗುಲಾಮ್ ಮೊಹಮ್ಮದ್ ಭಟ್ ಅವರ ಮಗ ಮೊಹಮ್ಮದ್ ಇಸ್ಮಾಯಿಲ್ ಭಟ್ ಎಂದು ಗುರುತಿಸಲಾಗಿದೆ. ತಪಾಸಣೆ ವೇಳೆ ಭದ್ರತಾ ಪಡೆಗಳು ಇವರ ಬಳಿ ಎರಡು ಪಿಸ್ತೂಲ್‌ಗಳು, ಎರಡು ಮ್ಯಾಗಜೀನ್‌ಗಳು ಮತ್ತು 25 ಸುತ್ತು ಪಿಸ್ತೂಲ್ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಖೈಮೋಹ್ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಬಂಧ ಹೆಚ್ಚಿನ ತನಿಖೆ ಆರಂಭವಾಗಿದೆ.